ಶಿವಮೊಗ್ಗ, ಜ.13:
ರಕ್ತದಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಸಧೃಢವಾಗಿರುತ್ತದೆ. ರಕ್ತಕ್ಕೆ ರಕ್ತವೇ ಬದಲಿಯಾಗಬಲ್ಲದೇ ಹೊರತು ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವೇ ಇಲ್ಲ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಚಿದಾನಂದ ವಟಾರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ನಗರದ ಎಟಿಎನ್ಸಿ ಕಾಲೇಜಿನ ಚಂದನಾ ಸಭಾಂಗಣದಲ್ಲಿ, ಎನ್ಇಎಸ್ ಮತ್ತು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ತರುಣೋದಯ ಘಟಕ, ಎನ್ಎಸ್ಎಸ್ ಸಂಸ್ಥೆ, ಹಾಗೂ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ, ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವೈದ್ಯರ ಸಲಹೆ ಮೇರೆಗೆ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ, ಹೃದಯಘಾತದ ಪ್ರಮಾಣ ಕಡಿಮೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ರಕ್ತದಾನ ಮಾಡುವುದರಿಂದ, ಸದಾ ಲವಲವಿಕೆಯಿಂದ ಇರಲು ಸಾಧ್ಯ. ಏಕಾಗ್ರತೆ ಹೆಚ್ಚಾಗುತ್ತದೆ. ಮತ್ತೊಬ್ಬರ ಪ್ರಾಣ ಉಳಿಸುವಂತಹ ಪವಿತ್ರ ಕಾರ್ಯ ಮಾಡುವ ಸಂತಸ ಇರುತ್ತದೆ ಎಂದು ಹೇಳಿದರು. ಪ್ರಸ್ತುತ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ನಿತ್ಯವೂ ನೂರಾರು ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದು, ರಕ್ತದಾನಿಗಳು ಮುಂದೆ ಬರಬೇಕೆಂದು ಮನವಿ ಮಾಡಿಕೊಂಡರು. ಒಂದು ಯೂನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದ್ದು, ಕೊರೋನಾ ಸಂದರ್ಭದಲ್ಲಿ ರಕ್ತದ ಬೇಡಿಕೆ ಹೆಚ್ಚಾಗಿದೆ. ಅದರ ಕೊರತೆ ನೀಗಿಸಲು ಯುವಕರು ಮುಂದಾಗಬೇಕೆಂದು ಕಾಲೇಜು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು. ನಾನು ಕೂಡ ಈ ಸಂದರ್ಭದಲ್ಲಿ ರಕ್ತದಾನ ಮಾಡಲು ಉತ್ಸುಕನಾಗಿದ್ದು, ಇಂದು ರಕ್ತದಾನ ಮಾಡುತ್ತಿದ್ದೆನೆ ಎಂದು ಹೇಳಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್ ಮಾತನಾಡಿದರು. ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಮತ್ತು ಯೂತ್ ಹಾಸ್ಟೆಲ್ ನ ಗೋ.ವ. ಮೋಹನಕೃಷ್ಣ ಇವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ತರುಣೋದಯ ಘಟಕದ ಅಧ್ಯಕ್ಷ ಎಸ್.ಎಸ್. ವಾಗೀಶ್ ಅಧ್ಯಕ್ಷತೆ ವಹಿಸಿದ್ದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ತರುಣೋದಯ ಘಟಕದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕುಮಾರ್, ವೈಹೆಚ್ಎಐ ನ ರಾಷ್ಟ್ರೀಯ ಸದಸ್ಯ ಅ.ನಾ. ವಿಜೇಂದ್ರರಾವ್, ವೈಹೆಚ್ಎಐ ನ ರಾಷ್ಟ್ರೀಯ ಹಾಸ್ಟೆಲ್ ಅಭಿವೃದ್ಧಿ ಸಮಿತಿ ಸದಸ್ಯ ದಿಲೀಪ್ ನಾಡಿಗ್, ಎನ್ಇಎಸ್ ಉಪಾಧ್ಯಕ್ಷ ಆಶ್ವಥ್ ನಾರಾಯಣ ಶೆಟ್ಟಿ, ಎಟಿಎನ್ಸಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಪ್ರೊ. ಕೆ.ಎಂ. ನಾಗರಾಜ್, ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್.ಎಂ. ಸುರೇಶ್ ಇತರರು ಉಪಸ್ಥಿತರರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©